ಮರೆಯಲಾಗದ ಮಹಾನಾಯಕ: ಅಟಲ್ ಬಿಹಾರಿ ವಾಜಪೇಯಿ
ಭಾರತೀಯ ರಾಜಕೀಯ ಇತಿಹಾಸದ ಧ್ರುವತಾರೆ, ಅಪ್ರತಿಮ ದೇಶಭಕ್ತ, ಮತ್ತು ‘ಅಜಾತಶತ್ರು’ ಎಂದೇ ಖ್ಯಾತರಾದ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮುತ್ಸದ್ದಿಗಳಲ್ಲಿ ಒಬ್ಬರು. ಕಂಚಿನ ಕಂಠದ ವಾಗ್ಮಿ, ಕವಿ, ಪತ್ರಕರ್ತ ಹಾಗೂ ನಿಸ್ವಾರ್ಥ ಜನನಾಯಕನಾಗಿ ದೇಶಕ್ಕೆ ಮಾರ್ಗದರ್ಶಿಯಾದ ಅಟಲ್ ಜೀ ಅವರ ನೂರನೇ ಜನ್ಮದಿನದ ಸುಸಂದರ್ಭದಲ್ಲಿ ಅವರ ಅಪ್ರತಿಮ ಕೊಡುಗೆಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ಬಾಲ್ಯ ಮತ್ತು ಆರಂಭಿಕ ಜೀವನ
ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 25, 1924 ರಂದು ಮಧ್ಯಪ್ರದೇಶದ ಗ್ವಾಲಿಯರ್ನ ‘ಸಿಂದೆ ಕಿ ಚವ್ವಾಣಿ’ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ತಾಯಿ ಕೃಷ್ಣದೇವಿ ಅವರ ಸುಪುತ್ರನಾದ ಅಟಲ್ ಜೀ, ಬಾಲ್ಯದಿಂದಲೇ ಸಭ್ಯತೆ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡಿದ್ದರು. ಅವರ ಸಮಯ ಪ್ರಜ್ಞೆ ಹಾಗೂ ಉದಾರ ವ್ಯಕ್ತಿತ್ವ ಇಂದಿಗೂ ರಾಜಕಾರಣಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ.
ಹೋರಾಟದ ಹಾದಿ ಮತ್ತು ರಾಜಕೀಯ ಪ್ರವೇಶ
ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಾಜಪೇಯಿ ಅವರು ರಾಷ್ಟ್ರಸೇವೆಯ ಹಂಬಲದಿಂದ ಅವಿವಾಹಿತರಾಗಿಯೇ ಉಳಿದರು. ಕೇವಲ 12ನೇ ವಯಸ್ಸಿನಲ್ಲಿಯೇ (1939) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ವಯಂಸೇವಕರಾಗಿ ಸಾರ್ವಜನಿಕ ಜೀವನ ಪ್ರವೇಶಿಸಿದ ಅವರು, 1942ರ ‘ಕ್ವಿಟ್ ಇಂಡಿಯಾ’ ಚಳವಳಿಯ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದರು.
1957ರಲ್ಲಿ ಮೊದಲ ಬಾರಿಗೆ ಲೋಕಸಭೆ ಸದಸ್ಯರಾಗಿ ಆಯ್ಕೆಯಾದ ಅವರು, ಅಂದಿನಿಂದ ಸುಮಾರು ಐದು ದಶಕಗಳ ಕಾಲ ಸಂಸದೀಯ ಪಟುವಾಗಿ ಮಿಂಚಿದರು. 1977ರಲ್ಲಿ ಭಾರತದ ವಿದೇಶಾಂಗ ಸಚಿವರಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿಸಿದರು.
ಪ್ರಜಾಪ್ರಭುತ್ವದ ರಕ್ಷಕ ಮತ್ತು ಪ್ರಧಾನಿಯಾಗಿ ಸಾಧನೆ
ಅಟಲ್ ಜೀ ಅವರು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಅಚಲ ನಂಬಿಕೆ ಹೊಂದಿದ್ದರು. “ಸಂಖ್ಯೆಗಳ ಆಟ ನಡೆಯುತ್ತಲೇ ಇರುತ್ತದೆ, ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ಈ ದೇಶ ಮತ್ತು ಪ್ರಜಾಪ್ರಭುತ್ವ ಶಾಶ್ವತವಾಗಿ ಉಳಿಯಬೇಕು” ಎಂಬ ಅವರ ಮಾತುಗಳು ಅವರಲ್ಲಿದ್ದ ದೇಶಪ್ರೇಮಕ್ಕೆ ಸಾಕ್ಷಿ. ಅವರು ಮೂರು ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.
ಮೈಲಿಗಲ್ಲು ಸಾಧನೆಗಳು
- ಪೋಖ್ರಾನ್ ಪರಮಾಣು ಪರೀಕ್ಷೆ (1998): ಭಾರತವನ್ನು ಪರಮಾಣು ಶಕ್ತಿ ರಾಷ್ಟ್ರವನ್ನಾಗಿ ಘೋಷಿಸುವ ಮೂಲಕ ದೇಶದ ಭದ್ರತೆಯನ್ನು ಬಲಪಡಿಸಿದರು.
- ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ: ಹಳ್ಳಿ ಹಳ್ಳಿಗಳಿಗೂ ರಸ್ತೆ ಸಂಪರ್ಕ ಕಲ್ಪಿಸುವ ಮೂಲಕ ಗ್ರಾಮೀಣ ಭಾರತದ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಿದರು.
- ಕಾರ್ಗಿಲ್ ಯುದ್ಧದ ಜಯ: ಪಾಕಿಸ್ತಾನದ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ವಿಜಯ ತಂದುಕೊಡುವಲ್ಲಿ ಅವರ ಚಾಣಕ್ಯ ನೀತಿ ಪ್ರಮುಖವಾಗಿತ್ತು.
- ಶಾಂತಿ ಮಂತ್ರ: ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆ ನಡೆಸಲು ‘ಲಾಹೋರ್ ಬಸ್ ಯಾತ್ರೆ’ ಕೈಗೊಂಡ ಎದೆಗಾರಿಕೆ ಅವರದಾಗಿತ್ತು.
ಗೌರವ ಮತ್ತು ಪರಂಪರೆ
ಇವರ ನಿಸ್ವಾರ್ಥ ಸೇವೆಗೆ ಮನ್ನಣೆ ನೀಡಿ ಭಾರತ ಸರ್ಕಾರವು 1992 ರಲ್ಲಿ ‘ಪದ್ಮವಿಭೂಷಣ’ ಮತ್ತು 2015 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಿ ಗೌರವಿಸಿತು. 2014ರಿಂದ ಅವರ ಜನ್ಮದಿನವನ್ನು ಭಾರತ ಸರ್ಕಾರವು ‘ರಾಷ್ಟ್ರೀಯ ಸುಶಾಸನ ದಿನ’ ವನ್ನಾಗಿ ಆಚರಿಸುತ್ತಿದೆ.

