ಮೂರ್ನಾಡಿನಲ್ಲಿ ವಿಜೃಂಭಣೆಯಿಂದ ನಡೆದ ಗೌರಿ-ಗಣೇಶೋತ್ಸವ ಶೋಭಾಯಾತ್ರೆ
ಮೂರ್ನಾಡು: ಮೂರ್ನಾಡಿನ ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಗೌರಿ-ಗಣೇಶೋತ್ಸವದ ದಿನ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಶ್ರದ್ಧಾಭಕ್ತಿಯಿಂದ 7 ದಿನಗಳವರೆಗೆ ಪೂಜಾ ಕಾರ್ಯಗಳನ್ನು ನಡೆಸಿ ಮಂಗಳವಾರ ರಾತ್ರಿ ಬಲಮುರಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.
ಮೂರ್ನಾಡಿನ ವೆಂಕಟೇಶ್ವರ ಕಾಲೋನಿಯ ವಿನಾಯಕ ಯುವಕ ಮಂಡಳಿಯ ವತಿಯಿಂದ 34ನೇ ವರ್ಷದ ಗೌರಿ-ಗಣೇಶೋತ್ಸವದ ಗಣೇಶ ಉತ್ಸವ ಮೂರ್ತಿ, ಮೂರ್ನಾಡು ಗಾಂಧಿನಗರದ ಶ್ರೀರಾಮ ಮಂದಿರ ಸೇವಾ ಸಮಿತಿಯ ವತಿಯಿಂದ 33ನೇ ವರ್ಷದ ಗೌರಿ-ಗಣೇಶೋತ್ಸವದ ಉತ್ಸವ ಗಣೇಶ ಮೂರ್ತಿ, ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ಮೂರ್ನಾಡು ಪಟ್ಟಣದ ಟಿ ಜಂಕ್ಷನ್ನಲ್ಲಿ 31ನೇ ವರ್ಷದ ಗೌರಿ-ಗಣೇಶೋತ್ಸವದ ಗಣೇಶ ಮೂರ್ತಿ, ಗಜೇಂದ್ರ ಯುವ ಶಕ್ತಿ ಸಂಘದ ವತಿಯಿಂದ 6ನೇ ವರ್ಷದ ಗೌರಿ-ಗಣೇಶೋತ್ಸವದ ಗಣೇಶ ಮೂರ್ತಿ, ಅಯ್ಯಪ್ಪ ಗೆಳೆಯರ ಬಳಗ, ಎಂ-ಟೌನ್ ಇವರ ವತಿಯಿಂದ 2ನೇ ವರ್ಷದ ಗೌರಿ-ಗಣೇಶೋತ್ಸವದ ವಿನಾಯಕ ಮೂರ್ತಿ, ಕೋಡಂಬೂರಿನ ವಿಘ್ನೇಶ್ವರ ಗೆಳೆಯರ ಬಳಗದಿಂದ 17ನೇ ವರ್ಷದ ಗೌರಿ-ಗಣೇಶೋತ್ಸವ ಅಂಗವಾಗಿ ಗಣೇಶ ಮೂರ್ತಿಗಳನ್ನು ಅಲಂಕೃತ ಮಂಟಪದಲ್ಲಿರಿಸಿ ಮೂರ್ನಾಡಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. 6 ಮಂಟಪಗಳಲ್ಲಿ ಪ್ರತಿ ಮಂಟಪದಲ್ಲೂ ಡಿಜೆ ಸೌಂಡ್ಸ್ಗಳ ಅಬ್ಬರವಿತ್ತು. ಮಹಿಳೆಯರು, ಮಕ್ಕಳು ಡಿಜೆ ಸೌಂಡ್ಸ್ನ ಹೆಜ್ಜೆ ಹಾಕಿದರು. ಮೂರ್ನಾಡಿನ ಮುಖ್ಯ ರಸ್ತೆಗಳಲ್ಲಿ ಶೋಭಯಾತ್ರೆಯಲ್ಲಿ ಭಕ್ತಾಧಿಗಳು, ಮಹಿಳೆಯರು, ಮಕ್ಕಳು ಡಿಜೆ ಸೌಂಡ್ಸ್ನ ಹೆಜ್ಜೆ ಹಾಕಿದರು. ನಂತರ ಬಲಮುರಿಯ ಕಾವೇರಿ ನದಿಯಲ್ಲಿ ಎಲ್ಲಾ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ವಿಶೇಷತೆ: ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ಮೂರ್ನಾಡು ಪಟ್ಟಣದ ಟಿ ಜಂಕ್ಷನ್ನಲ್ಲಿ 31ನೇ ವರ್ಷದ ಗೌರಿ-ಗಣೇಶೋತ್ಸವದ ಗಣೇಶ ಮೂರ್ತಿಯನ್ನು ಸಂಘದ ಸದಸ್ಯ ಮದನ್ ತಯಾರು ಮಾಡಿ ಗಮನ ಸೆಳೆದಿದ್ದಾನೆ. ಮೂರ್ನಾಡಿನಲ್ಲಿ ತನ್ನ ಮನೆಯಲ್ಲಿಯೆ ಒಂದು ತಿಂಗಳ ಹಿಂದೆಯ ಮೂರ್ತಿ ಮಾಡಲು ಯೋಗ್ಯವಾದ ಮಣ್ಣನ್ನು ಮಂಗಳೂರಿನಿಂದ ತರಸಿ, ಕೈಯಲ್ಲಿ ತ್ರಿಶೂಲ, ಪಾಶಗಳನ್ನು ಹಿಡಿದು ಸಿಂಹಾಸನದ ಮೇಲೆ ಆಸೀನವಾಗಿರುವ ಪರಿಸರ ಸ್ನೇಹಿ ಗಣಪತಿಯನ್ನು ತಯಾರು ಮಾಡಿರುವುದು ಮೂರ್ನಾಡಿನ ಸುತ್ತಮುತ್ತಲಿನ ಭಕ್ತಾಧಿಗಳ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಮೂರ್ತಿಯ ತಯಾರಿಯಲ್ಲಿ ಮದನ್ನ ಸ್ನೇಹಿತರಾದ ವಿಘ್ನೇಶ್ ಮತ್ತು ರಂಜತ್ ಅವರ ಸಹಕಾರ ನೀಡಿರುತ್ತಾರೆ. 7 ದಿನಗಳ ಕಾಲ ಪೂಜೆ ಕೈಂಕರ್ಯಗಳನ್ನು ನಡೆಸಿ, ಬಲಮುರಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.
ವರದಿ: ಟಿ.ಸಿ. ನಾಗರಾಜ್, ಮೂರ್ನಾಡು.

