‘ಸಮಗ್ರ ಕೃಷಿಯಿಂದ ಸುಸ್ಥಿರತೆ’ ಘೋಷವಾಕ್ಯದಡಿ ಮಂಡ್ಯದಲ್ಲಿ ಕೃಷಿ ಮೇಳ; ಡಿ. 5ಕ್ಕೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ
ಮಡಿಕೇರಿ, ಡಿ. 1 ಸುದ್ದಿ:
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (UAS) ವತಿಯಿಂದ ಇದೇ ಡಿಸೆಂಬರ್ 5 ರಿಂದ 7 ರವರೆಗೆ ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿ.ಸಿ. ಫಾರಂನಲ್ಲಿ ‘ಕೃಷಿ ಮೇಳ-2025’ ನಡೆಯಲಿದೆ. ಈ ಬಾರಿಯ ಮೇಳದ ಘೋಷವಾಕ್ಯ ‘ಸಮಗ್ರ ಕೃಷಿಯಿಂದ ಸುಸ್ಥಿರತೆ’ ಎಂಬುದಾಗಿದೆ.
ಸರ್ಚ್ ಕೊಡಗು ಸುದ್ದಿ ಅಪ್ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಅರಣ್ಯ ಮಹಾವಿದ್ಯಾಲಯದ ಡೀನ್ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಜಿ.ಎಂ. ದೇವಗಿರಿ ಅವರು, ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಕೊಡಗು, ಮಂಡ್ಯ, ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ರೈತರ ಅಭಿವೃದ್ಧಿಯ ಚಿಂತನೆಯೊಂದಿಗೆ ಕೃಷಿ ಮೇಳವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ
ಕೃಷಿ ಮೇಳವನ್ನು ಆರಂಭಿಕ ದಿನವಾದ ಡಿ. 5 ರಂದು ಬೆಳಗ್ಗೆ 10.30 ಗಂಟೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಅಂದೇ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡಗು ಜಿಲ್ಲೆಯ 10 ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಡಾ. ಜಿ.ಎಂ. ದೇವಗಿರಿ ಮಾಹಿತಿ ನೀಡಿದರು.
ಕೃಷಿ ಮೇಳದ ಪ್ರಮುಖ ಉದ್ದೇಶ
ಕೊಡಗನ್ನು ಒಳಗೊಂಡಂತೆ ವಿ.ವಿ. ವ್ಯಾಪ್ತಿಯ ಎಲ್ಲಾ ಜಿಲ್ಲೆಗಳು ಕೃಷಿ ಪ್ರಧಾನವಾಗಿವೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಂದಾಗಿ ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿ ಕುಂಠಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಭತ್ತ ಸೇರಿದಂತೆ ವಿವಿಧ ಕೃಷಿಗಳನ್ನು ತಾಂತ್ರಿಕತೆಯೊಂದಿಗೆ ಮತ್ತು ಆಧುನಿಕ ವಿಧಾನಗಳನ್ನು ಬಳಸಿಕೊಂಡು ಹೇಗೆ ಲಾಭದಾಯಕವನ್ನಾಗಿ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಕೃಷಿ ಮೇಳದಲ್ಲಿ ತಾಂತ್ರಿಕ ಅಧಿವೇಶನಗಳು ಮತ್ತು ರೈತರೊಂದಿಗಿನ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಾ. ದೇವಗಿರಿ ತಿಳಿಸಿದರು.
ವಿಶೇಷ ಬಸ್ ವ್ಯವಸ್ಥೆ ಹಾಗೂ ಸಂಪರ್ಕ ಮಾಹಿತಿ
ಕೃಷಿ ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ರೈತರ ಅನುಕೂಲಕ್ಕಾಗಿ ಕೊಡಗಿನಿಂದ ಡಿಸೆಂಬರ್ 5 ರಂದು ಒಟ್ಟು 10 ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದವರ ವಿವರಗಳು:
- ಮಡಿಕೇರಿ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ: ಡಾ. ಹೆಚ್.ಸಿ. ಲತಾ (ಮೊ. 8884525995)
- ಪೊನ್ನಂಪೇಟೆ ಕ್ಷೇತ್ರ ಅಧೀಕ್ಷಕರು: ಡಾ. ಪ್ರಶಾಂತ್ (ಮೊ. 7892593258)
ಕೃಷಿ ವಿವಿಯ ಹೊಸ ಭತ್ತದ ತಳಿಗಳು
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಇಲ್ಲಿಯವರೆಗೆ 45 ಭತ್ತದ ತಳಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಕೊಡಗಿನ ವಾತಾವರಣಕ್ಕೆ ಒಗ್ಗಿಕೊಳ್ಳುವ, ಬೆಂಕಿ ರೋಗ ನಿರೋಧಕತೆಯನ್ನು ಹೊಂದಿರುವ ಮತ್ತು ಅಧಿಕ ಇಳುವರಿಯ ‘ತುಂಗಾ’, ‘ಕೆಪಿಆರ್-1’ ಮತ್ತು ‘ಕೆಪಿಆರ್-2’ ಎಂಬ ಮೂರು ಹೊಸ ತಳಿಗಳನ್ನು ಪರಿಚಯಿಸಲಾಗಿದೆ ಎಂದು ಡಾ. ದೇವಗಿರಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಅಧೀಕ್ಷಕರುಗಳಾದ ಮಡಿಕೇರಿಯ ಡಾ. ಹೆಚ್.ಸಿ. ಲತಾ ಹಾಗೂ ಪೊನ್ನಂಪೇಟೆಯ ಡಾ. ಪ್ರಶಾಂತ್ ಉಪಸ್ಥಿತರಿದ್ದರು.
