ವಿರಾಜಪೇಟೆಯಲ್ಲಿ ‘ಕ್ರಿಸ್ಮಸ್ ಗಾನ ತರಂಗ- 2025’ ಸ್ಪರ್ಧೆ; ಒಗ್ಗಟ್ಟಿನ ಬಲಕ್ಕೆ ಕರೆ


 

ಕ್ರಿಸ್ಮಸ್ ಸಂದೇಶ: ವಿರಾಜಪೇಟೆಯಲ್ಲಿ ‘ಕ್ರಿಸ್ಮಸ್ ಗಾನ ತರಂಗ- 2025’ ಸ್ಪರ್ಧೆ; ಒಗ್ಗಟ್ಟಿನ ಬಲಕ್ಕೆ ಕರೆ

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ವಿರಾಜಪೇಟೆ, ಡಿ. 9:

ವಿರಾಜಪೇಟೆಯಲ್ಲಿ ‘ಕ್ರಿಸ್ಮಸ್ ಗಾನ ತರಂಗ- 2025’ ಸ್ಪರ್ಧೆ; ಒಗ್ಗಟ್ಟಿನ ಬಲಕ್ಕೆ ಕರೆ

ಕ್ರಿಸ್ಮಸ್ ಹಬ್ಬದ ಸಡಗರ ಮತ್ತು ಸೌಹಾರ್ದತೆಯನ್ನು ಆಚರಿಸಲು, ಕ್ಯಾರೋಲ್‌ಗಳ ಮೂಲಕ ಪ್ರೀತಿ, ಶಾಂತಿ ಮತ್ತು ಏಕತೆಯ ಸಂದೇಶಗಳನ್ನು ಹರಡುವ ಉದ್ದೇಶದಿಂದ ವಿರಾಜಪೇಟೆಯಲ್ಲಿ ‘ಕ್ರಿಸ್ಮಸ್ ಗಾನ ತರಂಗ- 2025’ ಗಾಯನ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ವಿರಾಜಪೇಟೆಯ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಘಟಕವು, ಸಂತ ಅನ್ನಮ್ಮ ದೇವಾಲಯದ ಸಹಯೋಗದೊಂದಿಗೆ, ದೇವಾಲಯದ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಒಗ್ಗಟ್ಟಿನ ಸಂದೇಶ

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ರೆ.ಫಾ. ಎಸ್.ಜೆ. ಪ್ರಾನ್ಸಿಸ್ ಸೆರಾವೋ ಅವರು ಮಾತನಾಡಿ, “ಡಿಸೆಂಬರ್ ಬಂದ ಕೂಡಲೇ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಉತ್ಸಾಹ ಎಲ್ಲರಲ್ಲೂ ಮನೆಮಾಡಿರುತ್ತದೆ. ಕ್ರಿಶ್ಚಿಯನ್ ಬಾಂಧವರು ಒಗ್ಗೂಡಿ ಆಚರಿಸುವ ಕ್ರಿಸ್ಮಸ್ ಹಬ್ಬವು ವಿಶ್ವಕ್ಕೆ ಸಮಾನತೆ ಮತ್ತು ಸಾರ್ಥಕತೆಯ ಪಾಠವನ್ನು ಬೋಧಿಸುತ್ತದೆ. ಕ್ರಿಸ್ಮಸ್ ಶಾಂತಿ-ಸಮಾಧಾನವನ್ನು ಸಾರುವ ಹಬ್ಬವಾಗಿದ್ದು, ಜಗತ್ತಿಗೆ ಒಗ್ಗಟ್ಟಿನ ಬಲವನ್ನು ಸಾರುತ್ತದೆ,” ಎಂದು ಪ್ರತಿಪಾದಿಸಿದರು.

ಇದೇ ವೇಳೆ, ಸಂಸ್ಥೆಯ ಮೂಲಕ ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತಾ, ಕಷ್ಟದಲ್ಲಿರುವ ಹಾಗೂ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ಒದಗಿಸುವ ಸೇವೆಯು ನಿಜಕ್ಕೂ ಶ್ಲಾಘನೀಯ ಎಂದ ಅವರು, “ನಾವೆಲ್ಲರೂ ಒಂದಾಗಿ ಬಾಳಲು ಪಣತೊಡಬೇಕು ಮತ್ತು ‘ಇವ ನಮ್ಮವ’ ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು,” ಎಂದು ಕರೆ ನೀಡಿದರು.

ಉದ್ಘಾಟನೆ ಮತ್ತು ಉದ್ದೇಶ

ವಿರಾಜಪೇಟೆ ವಲಯದ ಶ್ರೇಷ್ಠ ಗುರುಗಳಾದ ಫಾ. ಜೇಮ್ಸ್ ಡೊಮೇನಿಕ್ ಅವರು ಧ್ವಜಾರೋಹಣ ನೆರವೇರಿಸಿ, ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅರಾಟ್ ಗ್ರೂಪ್‌ನ ಎಂ.ಡಿ. ಟೋನಿ ವಿನ್ಸೆಂಟ್ ಅವರು ಮಾತನಾಡಿ, ಕ್ರಿಸ್ಮಸ್ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷವನ್ನು ತರುವ ಆಚರಣೆಯಾಗಿದೆ. ದಾನ ಮಾಡುವ ಮೂಲಕ ಕೃತಜ್ಞರಾಗಿರಬೇಕು ಮತ್ತು ಉದಾರವಾಗಿರಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಸಂಸ್ಥೆಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‌ನ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷರಾದ ಆಂಟೋನಿ ರಾಬಿನ್ ಅವರು ಮಾತನಾಡಿ, ಹದಿನೈದು ವರ್ಷಗಳಿಂದ ಸಮುದಾಯದ ಒಗ್ಗಟ್ಟಿಗಾಗಿ ಸಂಸ್ಥೆ ಶ್ರಮಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಕ್ರಿಸ್ಮಸ್ ಗಾಯನ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಸಮುದಾಯದ ಐಕ್ಯತೆ ಹಾಗೂ ಚರ್ಚ್ ಕಾನ್ವೆಂಟ್‌ಗಳಲ್ಲಿರುವ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುವುದು ಹಾಗೂ ಸಮಾಜಸೇವೆಯು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.

ಗಣ್ಯರ ಉಪಸ್ಥಿತಿ ಮತ್ತು ಸನ್ಮಾನ

ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ಉಪಾಧ್ಯಕ್ಷ ಡಿ.ಕೆ. ಬ್ರಿಜೇಶ್ ಹಾಗೂ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮದಲೈಮುತ್ತು ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ನಡೆಸಲು ಪ್ರೇರಣೆಯಾಗಬೇಕು ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ, ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಮತ್ತು ಕಾರ್ಯಕ್ರಮಕ್ಕೆ ಕೈಜೋಡಿಸಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು

  • ಧರ್ಮಗುರುಗಳಾದ ಜೇಮ್ಸ್ ಡೊಮೆನಿಕ್
  • ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್
  • ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರ್ವಿನ್ ಲೋಬೋ
  • ತಾಲೂಕು ಉಪಾಧ್ಯಕ್ಷ ಆಂತೋನಿ ಜೋಸೆಫ್
  • ಕಾರ್ಯದರ್ಶಿ ಸ್ಟಾಲಿನ್, ದಿನೇಶ್ ಮತಿಯಾಸ್
  • ಸಹಾಯಕ ಧರ್ಮಗುರು ಅಭಿಲಾಷ್
  • ಕೊಡಗಿನ ವಿವಿಧ ಭಾಗಗಳ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕ್ರಿಸ್ಮಸ್ ಹಬ್ಬದ ಸೌಹಾರ್ದತೆ ಮತ್ತು ಏಕತೆಯ ಸಂದೇಶವನ್ನು ಸಾರಿದ ಗಾನ ತರಂಗ ಕಾರ್ಯಕ್ರಮದ ವರದಿ.
ಹಂಚಿಕೊಳ್ಳಿ
4.5 2 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x