ಸರ್ಚ್‌ ಕೂರ್ಗ್‌ ಮೀಡಿಯಾ

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Kanchi Kamakshiyamma

Kanchi Kamakshiyamma

Reading Time: 2 minutesಈ ದೇವಾಲಯವು ಮಡಿಕೇರಿಯ ಗೌಳಿ ಬೀದಿಯಲ್ಲಿದ್ದು, ಸೌಮ್ಯ ಸ್ವರೂಪಿಣಿಯಾದ ಕಂಚಿಕಾಮಾಕ್ಷಿದೇವಿಯೂ, ಉಗ್ರ ಸ್ವರೂಪಿಣಿಯಾದ ಮುತ್ತು ಮಾರಿಯಮ್ಮ ದೇವಿಯನ್ನು ಈ ದೇವಸ್ಥಾನದಲ್ಲಿ ಪ್ರತ್ಯೇಕವಾಗಿ ಗರ್ಭಗುಡಿಯನ್ನು ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ಶಕ್ತಿ ದೇವಿಗಳಲ್ಲಿ ಒಂದಾಗಿರುವ ಶ್ರೀ ಕಂಚಿಕಾಮಾಕ್ಷಿ ದೇವಿಯು ಪ್ರಜೆಗಳ ಕಷ್ಟ-ಕಾರ್ಪಣ್ಯಗಳ ನಿವಾರಕಿಯೆನಿಸಿಕೊಂಡಿದ್ದಾಳೆ. ಕೈಯಲ್ಲಿ ಗಿಣಿಯನ್ನು ಹಿಡಿದುಕೊಂಡಿರುವುದು ಈ ಶಾಂತ ಸ್ವರೂಪಿಣಿಯ ವೈಶಿಷ್ಟತೆ. ಈ ಪುರಾತನ ದೇಗುಲವು ಕಾಲಾಂತರದಿಂದ ಹಲವಾರು ಮಾರ್ಪಾಟುಗಳನ್ನು ಹೊಂದುತ್ತಾ ಬಂದು ಪ್ರಸ್ತುತ ನಗರದ ಬೃಹತ್ ದೇವಾಲಯಗಳಲ್ಲಿ ಒಂದೆನಿಸಿದೆ. ಗರ್ಭಗುಡಿಯಲ್ಲಿ ಪುರಾತನ ಮೂಲ ವಿಗ್ರಹವಿದೆ. ನವೀಕರಣಗೊಂಡಿರುವ ಬೃಹತ್ ದೇಗುಲಕ್ಕೆ ವಿಶಿಷ್ಟವಾದ ರಾಜಗೋಪುರ ನಿರ್ಮಾಣವಾಗಿದೆ. ಈ ರಾಜಗೋಪುರ ಹೊಯ್ಸಳ ಶೈಲಿಯಲ್ಲಿದೆ. ಈ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಠಮಿ, ಅಯ್ಯಪ್ಪ ಸ್ವಾಮಿ ಪೂಜೆಗಳು ನಡೆಯುತ್ತದೆ. ನವರಾತ್ರಿಯಂದು ಕರಗವನ್ನು ಹೊರಡಿಸುತ್ತಾರೆ. ನಂತರ ಕುಂಭ ಪೂಜೆ, ಶಾಂತಿ ಪೂಜೆಗಳು ನಡೆಯುವದರ ಜೊತೆಗೆ ಏಪ್ರಿಲ್ ತಿಂಗಳಲ್ಲಿ ಮಾರಿಯಮ್ಮ ಉತ್ಸವ ಪೂಜೆಯನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಇಲ್ಲಿ ವ್ಯತ್ಯಾಸವೆಂದರೆ ಮಾರಿಯಮ್ಮ ಕರಗವನ್ನು ಹೂವಿನ ಬದಲು ಬೇವಿನ ಎಲೆಯಿಂದ ಅಲಂಕರಿಸಲಾಗುತ್ತದೆ. ಈ ದೇವಾಲಯದ ಪೂಜೆಯನ್ನು ಗೌಳಿ (ಯಾದವ) ಜನಾಂಗದವರು ನೆರವೇರಿಸುತ್ತಾರೆ.  

Pete Sri Rama mandira

Pete Sri Rama mandira

Reading Time: 2 minutes    ಮಡಿಕೇರಿ ನಗರದ ಕಾಲೇಜು ರಸ್ತೆ ಮತ್ತು ಹಿಲ್ ರಸ್ತೆ ಸೇರುವ ನಗರದ ಹೃದಯ ಭಾಗದಲ್ಲಿ ಕಂಗೊಳಿಸುವ ದೇಗುಲವೇ ಶ್ರೀ ಪೇಟೆ ರಾಮಮಂದಿರ. ಇದರ ಇತಿಹಾಸವು ಮಡಿಕೇರಿ ದಸರಾದೊಂದಿಗೆ ಬೆಸೆದುಕೊಂಡಿದೆ. ಸುಮಾರು 185 ವರ್ಷಗಳ ಹಿಂದೆ ಮಡಿಕೇರಿಯಲ್ಲಿ ತಲೆದೋರಿದ್ದ ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಕರಗಗಳನ್ನು ಹೊರಡಿಸುವ ನಿರ್ಧಾರವನ್ನು ಧಾರ್ಮಿಕ ಮುಖಂಡರು ಕೈಗೊಂಡರು. ಊರ ಹೊರಗಿರುವ ಶಕ್ತಿ ದೇವತೆಗಳನ್ನು ಊರ ಒಳಗೆ ಕರೆದು ನಗರ ಪ್ರದಕ್ಷಿಣೆ ಮಾಡಿಸುವುದು ಕ್ರಮಬದ್ಧವಾಗಿರಬೇಕು , ಪೌರಾಣಿಕ ಹಿನ್ನಲೆಯಿಂದ ಕೂಡಿರಬೇಕು ಎಂಬ ಭಾವನೆ ಮೂಡಿತು. ಆಗ ಪಾರ್ವತಿಯು ದುಷ್ಟ ಸಂಹಾರಕ್ಕೆ ಮುನ್ನ ಮೊದಲಿಗೆ ಅಣ್ಣನೆನಿಸಿಕೊಂಡ ಶ್ರೀ ಮಹಾ ವಿಷ್ಣುವಿನ ಬಳಿಗೆ ಹೋಗುವ ಪೌರಾಣಿಕ ಘಟನೆಯನ್ನು ಹಿನ್ನಲೆಯಾಗಿರಿಸಿಕೊಂಡು ಪಾರ್ವತಿಯ ಅಂಶವೆನಿಸಿಕೊಂಡಿರುವ ನಾಲ್ಕು ಶಕ್ತಿ ದೇವತೆಗಳನ್ನು ಊರೊಳಗೆ ಮಹಾವಿಷ್ಣುವಿನ ಸ್ಥಾನಕ್ಕೆ ಬರ ಮಾಡಿಕೊಳ್ಳುವ ಕ್ರಮ ವಿಧಿಗಳನ್ನು ರೂಪಿಸಲಾಯಿತು. ಆಗಿನ ಕಾಲದಲ್ಲಿ ನಗರದಲ್ಲಿ ಮಹಾವಿಷ್ಣ್ಣುವಿಗೆ ಸಂಬಂಧಿಸಿದ ಯಾವುದೇ ಪೂಜಾ ಸ್ಥಳವಿರದ ಕಾರಣ ನಗರದ ದೊಡ್ಡಪೇಟೆಯಲ್ಲಿ ಪೂಜಾ ಸ್ಥಳವೊಂದನ್ನು ನಿರ್ಮಿಸಿ ರಾಮನ ಚಿತ್ರವನ್ನಿಟ್ಟು ಪೂಜಿಸಲಾಯಿತು. ಅಲ್ಲದೆ ನವರಾತ್ರಿ ಸಂದರ್ಭ ಕರಗ ದೇವತೆಗಳು ಇಲ್ಲಿಗೆ ಆಗಮಿಸಿ ರಾಮ (ಅರ್ಥಾತ್ ಮಹಾವಿಷ್ಣು) ನಿಗೆ ಪೂಜೆ ಸಲ್ಲಿಸಿ ತಮ್ಮ ನಗರ ಪ್ರದಕ್ಷಿಣೆ ಕಾರ್ಯವನ್ನು ಆರಂಭಿಸಿದವು. ಈ ಸಂಪ್ರದಾಯವು 185 ವರ್ಷ ಕಳೆದರು ಇಂದಿಗೂ ಹಾಗೆಯೇ ಮುಂದುವರೆಯುತ್ತಾ ಬಂದಿದೆ. ಹೀಗೆ ದಸರಾ ಉತ್ಸವ ಆಚರಣೆಗೆಂದು ನಿರ್ಮಾಣವಾದ ರಾಮದೇಗುಲವು ಕ್ರಮೇಣ ಪ್ರಸಿದ್ಧಿ ಪಡೆಯುತ್ತಾ ಬಂದಿತು. ಪ್ರಸ್ತುತ ಶ್ರೀ ರಾಮಮಂದಿರದಲ್ಲಿ ಪೂಜಾ ಕಾರ್ಯಗಳು, ಭಜನೆ, ಸಮಾರಂಭಗಳು ಜರುಗುತ್ತಿರುತ್ತವೆ.. ಹಳೆಯದಾಗಿದ್ದ ಪೇಟೆ ಶ್ರೀರಾಮಮಂದಿರ ದೇವಾಲಯವು ಇದೀಗ ಜೀರ್ಣೋದ್ಧಾರಗೊಂಡು ಸುಂದರವಾಗಿದೆ.  

error: Content is protected !!